ಆಜ್ಯ

"ಆಜ್ಯ" ಎಂಬ ಪದವು "ಅಞ್ಜೋಶ್ಚೋಪಸಂಖ್ಯಾನಂಸಂಜ್ಞಾಯಾಂ" ಎಂಬ ವ್ಯಾಕರಣದ ವಾರ್ತಿಕದ ಪ್ರಕಾರ "ಕ್ಯಪ್" ಎಂಬ ಪ್ರತ್ಯಯವು ಬಂದು ಅಜ್ಯಂ ಎಂದು ರೂಪವಾಗುತ್ತದೆ. ಇದಕ್ಕೆ "ಅಙ್" ಎಂಬ ಉಪಸರ್ಗವು ಸೇರಿ "ಅಜ್ಯಂ" ಎಂದು ರೂಪವಾಗುತ್ತದೆ. अज-गति श्रोपणयोः ಎಂಬ ಧಾತುವಿನ ರೂಪವಿದಲ್ಲ, ಏಕೆಂದರೆ ಆಜ್ಯ ಪದಕ್ಕೆ ವೈದಿಕರು "ಅವಗ್ರಹವನ್ನು" ಹೇಳಬೇಕೆಂದು ಪತಂಜಲಮಾಹಾಭಾಷ್ಯಕಾರರು ಹೇಳಿದ್ದಾರೆ. ಅಂದರೆ ಆಜ್ಯಮಿತ್ಯಾ-ಅಜ್ಯಂ (ತೈ.ಸಂ.1-6-1) ಎಂದು ಹೇಳಬೇಕು. ಆದರೆ ಅಸೇತು ಹಿಮಾಲಯದವರೆಗೆ ಯಾವ ವೈದಿಕರೂ ಹೇಳುತ್ತಿಲ್ಲ. ಅದಕ್ಕೆ ಪತಂಜಲ ಭಾಷ್ಯಕಾರರು "ನ ಲಕ್ಷಣೇನ ಪದಕಾರಾಃ ಅನುವರ್ತ್ಯಾಃ ಪದಕಾರೈರ್ನಾಮ ಲಕ್ಷಣಮನುವರ್ತ್ಯಂ ಯಥಾ ಲಕ್ಷಣಂ ಪದಂ ಕಾರ್ಯಮ್" (ಲಕ್ಷಣಶಾಸ್ತ್ರವು ಪದಕಾರರನ್ನು ಅನುಸರಿಸುವುದಿಲ್ಲ, ಪದಕಾರರು ಲಕ್ಷಣಶಾಸ್ತ್ರವನ್ನು ಅನುಸರಿಸಬೇಕು. ಲಕ್ಷಣಶಾಸ್ತ್ರದಂತೆ ಪದವಿಭಾಗವನ್ನು ಮಾಡಬೇಕು) ಎಂದಿದ್ದಾರೆ. ಆದರೆ ಇಂದಿಗೂ ಇದನ್ನು ಯಾರು ಕೇಳುವುದಿಲ್ಲ. ಅವಗ್ರಹವನ್ನು ಹೇಳದೇಇರುವುದನ್ನು ಪ್ರಾಮಾದಿಕಪಾಟ ಎಂದೇ ಹೇಳಿದ್ದಾರೆ. ಇದಿರಲಿ, ಇದರಿಂದ ಏನು ತೀರ್ಮಾನವಾಗುತ್ತದೆ ಎಂದರೆ ಅಜ-ಗತಿಕ್ಷೇಪಣಯೋಃ ಎಂಬ ಧಾತುವಿನಿಂದ ಈ ರೂಪವು ನಿಷ್ಟನ್ನವಾಗಿದ್ದರೆ ಆಗ ಅದು ಹಲನ್ತಧಾತುವಾಗಿ ಅದಕ್ಕೆ ಣ್ಯತ್ ಪ್ರತ್ಯಯವು ಬಂದು ಆಜ್ಯಂ ಎಂದು ಉಪಧಾವೃದ್ಧಿ ಬಂದು ಒಂದೇ ಪದವೆಂದಾಗುವುದು. ಆಗ "ಯತ್" ಆಗಲೀ "ಕ್ಯಪ" ಆಗಲೀ ಬರುತ್ತಿರಲಿಲ್ಲ. ಆಗ ಅವಗ್ರಹವನ್ನು ಹೇಳಬೇಕೆಂದು ಭಾಷ್ಯಕಾರರಿಗೆ ಹೇಳುವುದಕ್ಕಾಗುತ್ತಿರಲಿಲ್ಲ.

    ಇದೂ ಅಲ್ಲದೇ ಆಡಿನ ತುಪ್ಪಕ್ಕೆ ಅಜ್ಯವೆಂಬ ಪದವು ಯಾವ ಗ್ರಂಥದಲ್ಲೂ ಕೋಶದಲ್ಲೂ ಬಳಕೆಯಲ್ಲಿ ಇಲ್ಲ. ರೂಢಿಯಲ್ಲೂ ಇಲ್ಲ, ಇದು ಕೇವಲ ವಿದ್ವತ್ಪ್ರದರ್ಶನ ಮಾತ್ರ. ಇದೂ ಅಲ್ಲದೆ ಗಟ್ಟಿಯಾದ ತುಪ್ಪವನ್ನು ಘೃತವೇ ಎಂತಲೂ ನೀರಾದದ್ದನ್ನು ಆಜ್ಯವೆಂತಲೂ ಹೇಳುತ್ತಾರೆಂದು ಏಕಾಂತವಾಗಿ ಹೇಳುವುದಕ್ಕೆ ಬರುವುದಿಲ್ಲ. ಏಕೆಂದರೆ ವೈದಿಕ ಪ್ರಯೋಗದಲ್ಲಿ "ಆಜ್ಯಂ ವಿಲಾಪ್ಯ" ಎಂದು ತುಪ್ಪವನ್ನು ಕಾಯಿಸಿ ನೀರಾಗಿ ಮಾಡಿಕೊಂಡು ಎಂದು ಬರೆದಿದೆ. ಆಗ ಗಟ್ಟಿಯಾದದ್ದಕ್ಕೂ ಆಜ್ಯವೆಂದು ಹೇಳಿದಂತಾಯಿತು. ಹಾಗೆಯೇ ಪಂಚಾಮೃತಸ್ನಾನದಲ್ಲೂ ಘೃತಂ ಮಿಮಿಕ್ಷಿರೇ ಎಂಬ ಮಂತ್ರದಿಂದ ಘೃತೇನ ಸ್ನಪಯಾಮಿ ಎಂದು ನೀರಾದ ತುಪ್ಪವನ್ನು ಘೃತವೆಂದು ಹೇಳಿದೆ. ಆದ್ದರಿಂದ ಇಡಿ ಸಂಸ್ಕೃತ ವಾಙ್ಮಯದಲ್ಲಿ ಎಲ್ಲಾ ಕಡೆಯಲ್ಲೂ ನೀರಾದ ತುಪ್ಪಕ್ಕೇ ಅಜ್ಯವೆಂತಲೂ ಗಟ್ಟಿಯಾದದ್ದಕ್ಕೇ ಘೃತವೆಂತಲೂ ಹೇಳುತ್ತಾರೆಂಬುದಿಲ್ಲ ಎಂದಾಯಿತು.

    ಆದರೆ ಎಲ್ಲಾದರೂ ಒಂದೇ ವಾಕ್ಯದಲ್ಲಿಯಾಗಲೀ ಒಂದೇ ಶ್ಲೋಕದಲ್ಲಿ ಆಗಲೀ ಈ ಎರಡು ಪದವನ್ನೂ ಬಳಸಿದ್ದರೆ ಆಗ ಪುನರುಕ್ತಿದೋಷಪರಿಹಾರಕ್ಕಾಗಿ ಹಾಗೆ ಮಾಡಿದರೂ ತಪ್ಪಾಗುವುದಿಲ್ಲ ಎಂದು ಹೇಳಬಹುದು ಅಥವಾ ಪ್ರಕರಣ ಸ್ಥಾನ ಸಮಾಖ್ಯೆ ಎಂಬ ನ್ಯಾಯದಿಂದಲಾಗಲೀ ಉಪಪದದ ಬಲದಿಂದಲಾಗಲೀ ಆ ರೀತಿ ಎಂದರೆ ನೀರಾದ ತುಪ್ಪಕ್ಕೆ ಆಜ್ಯವೆಂತಲೂ ಇನ್ನೊಂದಕ್ಕೆ ಘೃತವೆಂತಲೂ ಅರ್ಥೈಸುವುದಾದರೆ ಅದೂ ಸಹ ಒಪ್ಪತಕ್ಕದ್ದೇ ಆಗಿರುತ್ತದೆ ಆದರೆ ಆ ತರಹದ ಬಲವಾದ ಕಾರಣವಿಲ್ಲದೆ ಸುಮ್ಮನೆ ಆ ಅರ್ಥವನ್ನು ಮಾಡುವುದನ್ನು ಪ್ರಾಚೀನರು ಒಪ್ಪುವುದಿಲ್ಲ.

    ಇನ್ನೂ ಒಂದು ಮಾತು ವೈದಿಕಾನುಷ್ಠಾನಕ್ಕೆ ಆಜ್ಯ ಎಂದರೆ ಹಸುವಿನ ತುಪ್ಪವೇ ಎಂಬುದನ್ನು ಎಲ್ಲಾ ಸ್ಮೃತಿಕಾರರೂ ಹೇಳಿರುತ್ತಾರೆ. ಅದನ್ನೇ ಪ್ರಶಸ್ತವೆಂದಿದ್ದಾರೆ. ಆದ್ದರಿಂದ ಅದನ್ನೆ ಅಜ್ಯ ಎಂಬ ಪದಕ್ಕೆ ಮುಖ್ಯಾರ್ಥ ಎಂದು ತೆಗೆದುಕೊಳ್ಳಬೇಕಾಗುತ್ತದೆ ಆದರೆ ಈ ಕಲಿಕಾಲದ ಮಹಿಮೆಯಿಂದ ನಂದಿನಿ ತುಪ್ಪದ ಪ್ಯಾಕೇಟ್ ನಲ್ಲಿರುವ ಹಸುವಿನ ಭಾವಚಿತ್ರದಿಂದಲೇ ಅದರದ್ದೆಂದು ಭವಿಸಿ ತೃಪ್ತರಾಗಬೇಕಾಗಿದೆ. ಒಳಹೊಕ್ಕು ವಿಚಾರವನ್ನು ಮಾಡುವುದಕ್ಕಾಗುವುದಿಲ್ಲ. ಏಕೆಂದರೆ ಅದರಲ್ಲಿ ಇನ್ಯಾವುದರ ಬೆರೆಕೆ ಇದೆ ಎಂಬುದು ಆ ತಯಾರಿಕರ ಹೊರತು ಬೇರೆಯವರಿಗೆ ಏನೂ ಗೊತ್ತಿರುವುದಿಲ್ಲ ಅದರಲ್ಲಿ ಆಡು, ಕುರಿ, ಮೇಕೆ, ಎಮ್ಮೆಯದು ಇದ್ದರೂ ಆಶ್ಚರ್ಯವೇನಿಲ್ಲ ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಹಸುವನ್ನು ಸಾಕುತ್ತಿದ್ದರು ಹಾಗಾಗಿ ನಿಶ್ಚಿತವಾಗಿ ಅದರಿಂದಲೇ ಎಲ್ಲಾ ಕರ್ಮವನ್ನು ಅವರು ಮಾಡುತ್ತಿದ್ದರು ಈಗ ಅದೆಲ್ಲಾ ಗತವೈಭವ. ಎಲ್ಲಾ ಕಲಿಮಹಿಮೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ